ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ಮುಂದಿನ ಚುನಾವಣೆಯಲ್ಲಿ ಯಾವಾಗಲೂ ಅಧಿಕಾರ ಕಳೆದುಕೊಂಡಿವೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಆ ಪ್ರವೃತ್ತಿಯನ್ನು ಮುರಿದು ಮರಳಿ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದೆ. ಆದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಮರಳಲು ಇದೇ ಪ್ರವೃತ್ತಿಯನ್ನು ನೆಚ್ಚಿಕೊಂಡಿದೆ ಮತ್ತು ಇದೇ ಚುನಾವಣೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಹ ಮಾಡಲು ಬಯಸಿದೆ. ೨೦೦-ಬಲದ ರಾಜ್ಯ ವಿಧಾನಸಭೆಯಲ್ಲಿ ಬಹುಮತಕ್ಕಾಗಿ ನೇರ ಹೋರಾಟ ನಡೆಸುತ್ತಿರುವ ಎರಡೂ ರಾಷ್ಟ್ರೀಯ ಪಕ್ಷಗಳು ಆಂತರಿಕ ಸಮಸ್ಯೆಗಳನ್ನು ನಿಭಾಯಿಸಬೇಕಿದೆ. ನವೆಂಬರ್ ೨೫ರಂದು ಮತದಾನ ನಡೆಯಲಿದೆ. ಗೆಹ್ಲೋಟ್ ಅವರು ಹಲವು ಹೊಸ ಜನಕಲ್ಯಾಣ ಯೋಜನೆಗಳು ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಅಭಿಯಾನದ ಮೂಲಕ ಕಾಂಗ್ರೆಸ್ಸನ್ನು ಮೇಲೆತ್ತಿದ್ದಾರೆ, ಆಡಳಿತ ವಿರೋಧಿ ಅಲೆಯನ್ನು ಮೊಂಡಾಗಿಸಿದ್ದಾರೆ ಮತ್ತು ಕಾರ್ಯಕರ್ತರ ಭರವಸೆ ಹೆಚ್ಚಿಸಿದ್ದಾರೆ. ಸೋಲು ಕಟ್ಟಿಟ್ಟ ಬುತ್ತಿ ಎಂಬ ಪರಿಸ್ಥಿತಿ ತಪ್ಪಿಸಿದ ನಂತರ, ಕಾಂಗ್ರೆಸ್ಸಿನ ಭವಿಷ್ಯವು ಈಗ ಅದು ಅಭ್ಯರ್ಥಿಗಳನ್ನು ಎಷ್ಟು ಚೆನ್ನಾಗಿ ಆಯ್ಕೆ ಮಾಡುತ್ತದೆ ಮತ್ತು ಕೊನೆಯ ಹಂತದಲ್ಲಿ ಹೇಗೆ ಪ್ರಚಾರ ನಿರ್ವಹಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಕಿರಿಯ ಸಹೋದ್ಯೋಗಿ ಮತ್ತು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಸಚಿನ್ ಪೈಲಟ್ ಈ ಹೋರಾಟದಲ್ಲಿ ಗೆಹ್ಲೋಟ್ ಅವರ ಹಿಂದೆ ನಿಂತಿದ್ದಾರೆ. ಇಲ್ಲಿಯವರೆಗಿನ ವರದಿಗಳ ಪ್ರಕಾರ ಮುಖ್ಯಮಂತ್ರಿಗಳ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲದಿದ್ದರೂ, ಕಾಂಗ್ರೆಸ್ಸಿನ ಅನೇಕ ಶಾಸಕರ ವಿರುದ್ಧ ಬಲವಾದ ಗಾಳಿ ಬೀಸುತ್ತಿದೆ. ಇದನ್ನು ನಿಭಾಯಿಸುವುದು ಕಷ್ಟ. ಹಲವು ಶಾಸಕರಿಗೆ ಪಕ್ಷದ ಟಿಕೆಟ್ ತಪ್ಪಿಸಿ ಹೊಸಮುಖಗಳನ್ನು ಕಣಕ್ಕಿಳಿಸಿ ಗೆಲ್ಲಬೇಕಿದೆ. ಇದು ಗೆಹ್ಲೋಟ್ ಅವರ ದಂತಕಥೆಯಂತಹ ರಾಜಕೀಯ ಕೌಶಲ್ಯಕ್ಕೆ ಪರೀಕ್ಷೆಯಾಗಲಿದೆ.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಮೇಲಿನ ಅವಲಂಬನೆಯನ್ನು ಕೊನೆಗಾಣಿಸಲು ಬಿಜೆಪಿ ಉತ್ಸುಕವಾಗಿದೆ. ಪಕ್ಷವು ಯಾವುದೇ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸುವುದಿಲ್ಲ ಎಂದು ಪಕ್ಷದ ಕೇಂದ್ರ ನಾಯಕತ್ವ ಸ್ಪಷ್ಟಪಡಿಸಿದೆ. ವಸುಂಧರಾ ಅವರ ಹಲವು ಅನುಯಾಯಿಗಳಿಗೆ ಈಗಾಗಲೇ ಟಿಕೆಟ್ ನಿರಾಕರಿಸಲಾಗಿದ್ದು, ಇನ್ನಷ್ಟು ಮಂದಿ ಇದೆ ಹಾದಿ ಹಿಡಿಯಲಿದ್ದಾರೆನಿಸುತ್ತದೆ. ಬಿಜೆಪಿ ಇದುವರೆಗೆ ಘೋಷಿಸಿದ ೪೧ ಅಭ್ಯರ್ಥಿಗಳ ಪೈಕಿ ಏಳು ಹಾಲಿ ಸಂಸದರನ್ನು ಕಣಕ್ಕಿಳಿಸಿದೆ ಮತ್ತು ಅದರ ಹಲವು ನಾಯಕರು ಈಗ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಬೆಳೆಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಮುಂದಿನ ತಲೆಮಾರು ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಲಿದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯೆದುರು ಇದೆಲ್ಲವೂ ಅಪ್ರಸ್ತುತ ಮತ್ತು ಈ ಮಹತ್ವಾಕಾಂಕ್ಷೆ ಪಕ್ಷಕ್ಕೆ ಸಹಾಯ ಮಾಡಬಹುದೆಂದು ಪಕ್ಷ ಭಾವಿಸಿದೆ. ವಸುಂಧರಾ ಅವರು ರಾಜ್ಯ ಮತ್ತು ಪಕ್ಷದಲ್ಲಿ ತಮ್ಮ ರಾಜಕೀಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ಬಹಿರಂಗವಾಗಿ ಬಂಡಾಯ ಏಳದಿದ್ದರೂ ಹೋರಾಟ ನಡೆಸುವ ಮಾರ್ಗ ಹುಡುಕಲಿದ್ದಾರೆ. ಮುಂದಿನ ತಿಂಗಳು ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ರಾಜಸ್ಥಾನ ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಹೆಚ್ಚು ಪ್ರತಿಷ್ಠಿತವಾಗಿದೆ. ರಾಜಸ್ಥಾನದ ಫಲಿತಾಂಶವು ೨೦೨೪ರ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಮೇಲೆ ಸಹ ಹೆಚ್ಚಿನ ಪ್ರಭಾವ ಬೀರಲಿದೆ.
COMMents
SHARE