ಲೇಖಕಿ-ಹೋರಾಟಗಾರ್ತಿ ಅರುಂಧತಿ ರಾಯ್ ಮತ್ತು ಕಾಶ್ಮೀರದ ಪ್ರಾಧ್ಯಾಪಕರ ವಿರುದ್ಧ ೨೦೧೦ರಲ್ಲಿ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಗೆ ಮರುಜೀವ ನೀಡಿರುವುದು ಸ್ಪಷ್ಟವಾಗಿ ದುರುದ್ದೇಶಪೂರಿತವಾಗಿದೆ. ಅಕ್ಟೋಬರ್ ೨೧, ೨೦೧೦ರಂದು ನವದೆಹಲಿಯಲ್ಲಿ ಅರುಂಧತಿ ರಾಯ್ ಮತ್ತು ಕಾಶ್ಮೀರ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಶೇಖ್ ಶೋಕತ್ ಹುಸೇನ್ ಅವರು ಮಾಡಿದ ಭಾಷಣಗಳು ರಾಷ್ಟ್ರೀಯ ಏಕತೆಗೆ ಧಕ್ಕೆ ನೀಡಿದ, ಜನರ ನಡುವೆ ವಿಭಜನೆಗಳನ್ನು ಪ್ರೋತ್ಸಾಹಿಸಿದ ಭಾಷಣಗಳಾಗಿದ್ದವು ಎಂದು ಅವರ ವಿರುದ್ಧ ಕ್ರಮ ಜರುಗಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೆನಾ ಈಗ ಅನುಮತಿ ನೀಡಿದ್ದಾರೆ. ನ್ಯೂಸ್ಕ್ಲಿಕ್ನ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ಇತ್ತೀಚೆಗೆ ಭಯೋತ್ಪಾದನೆ-ವಿರೋಧಿ ಕಾನೂನಿನಡಿ ಬಂಧಿಸಿದ ಹಿನ್ನೆಲೆಯಲ್ಲಿ ನೋಡುವುದಾದರೆ, ಈ ಕ್ರಮ ಸರ್ಕಾರದ ಟೀಕಾಕಾರರ ವಿರುದ್ಧ ಪ್ರತೀಕಾರವೇ ಸರಿ. ಗಮನಿಸಬೇಕಾದ ಅಂಶವೆಂದರೆ, ೨೦೧೦ರಲ್ಲಿ ಈ ಭಾಷಣಗಳು ದೇಶದ್ರೋಹದ ಮೊಕದ್ದಮೆಗೆ ಅರ್ಹವಾಗಿವೆ ಎಂದು ದೆಹಲಿ ಪೊಲೀಸರು ಭಾವಿಸಲಿಲ್ಲ. ಆದರೆ ದೂರುದಾರರು ದೆಹಲಿ ನ್ಯಾಯಾಲಯದ ಬಾಗಿಲು ತಟ್ಟಿದಾಗ, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಪೊಲೀಸರ ವಾದವನ್ನು ತಿರಸ್ಕರಿಸಿ ನವೆಂಬರ್ ೨೭, ೨೦೧೦ ರಂದು ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ದಾಖಲಿಸುವಂತೆ ಸೂಚಿಸಿದರು. ಪೊಲೀಸರು ಈ ಆದೇಶವನ್ನು ಪಾಲಿಸಿ ಅರುಂಧತಿ ರಾಯ್ ಮತ್ತು ಶೇಖ್ ಶೋಕತ್ ಹುಸೇನ್ ಅವರ ವಿರುದ್ಧ ದೇಶದ್ರೋಹ, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹೇಳಿಕೆಗಳು ನೀಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಹಲವು ನಿಬಂಧನೆಗಳಡಿ ಪ್ರಕರಣ ದಾಖಲಿಸಿದ್ದರು. ಎಫ್ಐಆರ್ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸೆಕ್ಷನ್ ೧೩ ಅನ್ನು ಸಹ ಪ್ರಸ್ತಾಪಿಸಿತ್ತು.
ಅಂದು ಮೂರು ಜನರ ಸಮಿತಿಯ ಮೂಲಕ ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿತ್ತು. ಅದಕ್ಕೆ ಧಕ್ಕೆ ಮಾಡಲು ಬಯಸದ ಅಂದಿನ ಸರ್ಕಾರವು ‘ಆಜಾದಿ: ಏಕೈಕ ಮಾರ್ಗ’ ಎಂಬ ಸಮಾವೇಶದಲ್ಲಿ ಮಾಡಿದ ಈ ಭಾಷಣಗಳ ವಿರುದ್ಧ ಯಾವುದೇ ಪ್ರಕರಣ ಮುಂದುವರಿಸಲು ಬಯಸಲಿಲ್ಲ ಎಂದು ತಿಳಿದುಬಂದಿದೆ. ಆ ನಂತರ ಕಾಶ್ಮೀರದಲ್ಲಿ ಅನೇಕ ಬದಲಾವಣೆಗಳಾಗಿವೆ: ವಿಶೇಷ ಸ್ಥಾನಮಾನ ರದ್ದುಗೊಂಡಿದೆ ಮತ್ತು ಈ ಪ್ರಾಂತ್ಯವು ರಾಜ್ಯತ್ವ ಕಳೆದುಕೊಂಡು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯಾಗಿದೆ. ಈ ಹಿನ್ನೆಲೆಯಲ್ಲಿ ೧೩ ವರ್ಷಗಳ ಹಿಂದಿನ ಭಾಷಣಗಳನ್ನು ಈಗ ಅಪರಾಧೀಕರಿಸುವಲ್ಲಿ ಅರ್ಥವಿಲ್ಲ. ಸಕ್ಸೇನಾ ಅವರು ದೇಶದ್ರೋಹ ಬಿಟ್ಟು ಇತರ ಆರೋಪಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲು ಅನುಮೋದನೆ ನೀಡಿದ್ದಾರೆ. ದೇಶದ್ರೋಹದ ಪ್ರಕರಣಗಳಿಗೆ ಸರ್ವೋಚ್ಚ ನ್ಯಾಯಾಲಯದ ನಿರ್ಬಂಧವಿದೆ. ಯುಎಪಿಎ ಕಾಯ್ದೆಯ ಸೆಕ್ಷನ್ ೪೫ರ ಪ್ರಕಾರ ಪ್ರಕರಣ ಮುಂದುವರೆಸಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿರುವುದರಿಂದ ಮತ್ತು ನಿಯಮಗಳು ಅದನ್ನು ಪಡೆಯಲು ಕಟ್ಟುನಿಟ್ಟಾದ ಕಾಲಮಿತಿಗಳನ್ನು ಸೂಚಿಸಿರುವುದರಿಂದ ಪೊಲೀಸರು ಯುಎಪಿಎ ಅಡಿ ಆರೋಪ ಹೊರಿಸುತ್ತಾರೆಯೋ ಇಲ್ಲವೋ ಸ್ಪಷ್ಟವಿಲ್ಲ. ಇನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಡಿ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅಪರಾಧಗಳ ವಿರುದ್ಧ ಕ್ರಮ ಜರುಗಿಸಲು ಮಿತಿ ಮೂರು ವರ್ಷಗಳು. ಈಗ ೧೩ ವರ್ಷಗಳ ಬಳಿಕ ಮಂಜೂರಾತಿ ನೀಡಲಾದ ಎಲ್ಲಾ ಮೂರು ವಿಭಾಗಗಳು - ಸೆಕ್ಷನ್ ೧೫೩ಎ, ೧೫೩ಬಿ ಮತ್ತು ೫೦೫ - ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುತ್ತವೆ. ಈ ಮಿತಿಯನ್ನು ಲೆಕ್ಕ ಹಾಕುವಾಗ ಮಂಜೂರಾತಿಗಾಗಿ ಕಾಯುತ್ತಿರುವ ಅವಧಿಯನ್ನು ಕೈಬಿಟ್ಟು ಲೆಕ್ಕ ಹಾಕಲು ಅವಕಾಶ ಇದೆಯಾದರೂ, ಮಿತಿಯ ಅವಧಿಯ ನಂತರ ಮಂಜೂರಾತಿ ಕೋರಿದರೆ ನ್ಯಾಯಾಲಯಗಳು ಅದನ್ನು ಒಪ್ಪುವುದು ಅನುಮಾನ.
COMMents
SHARE