‘ಹೆಚ್ಚಿನ ಹಣದುಬ್ಬರ’ವು ಸ್ಥೂಲ ಆರ್ಥಿಕ ಸ್ಥಿರತೆಗೆ ಒಡ್ಡುವ ಅಪಾಯದ ಬಗ್ಗೆ ಎಚ್ಚರಿಸುತ್ತಲೇ ಬಡ್ಡಿದರವನ್ನು ಹೆಚ್ಚಿಸದಿರುವುದು ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಅತ್ತ ದರಿ ಇತ್ತ ಪುಲಿ ಎಂಬಂತಹ ಪರಿಸ್ಥಿತಿಯಲ್ಲಿ ಸಿಲುಕಿದೆ ಎಂಬುದರ ಸ್ಪಷ್ಟ ಸೂಚನೆ. ಮೊದಲ ತ್ರೈಮಾಸಿಕದಲ್ಲಿ, ಪ್ರಮುಖ ಹಣದುಬ್ಬರ ಆರ್ಬಿಐನ ಮುನ್ಸೂಚನೆ ಶೇ. ೪.೬ಕ್ಕೆ ತುಂಬಾ ಹತ್ತಿರ ಶೇ. ೪.೬೩ರಷ್ಟು ದಾಖಲಾಯಿತು. ಆದರೆ ಎರಡನೇ ತ್ರೈಮಾಸಿಕದ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕ್ರಮವಾಗಿ ಚಿಲ್ಲರೆ ಹಣದುಬ್ಬರ ಶೇ. ೭.೪೪ ಮತ್ತು ಶೇ. ೬.೮೩ರಷ್ಟು ದಾಖಲಾಗಿದೆ. ತಾನು ನೀಡಿದ್ದ ಹಣದುಬ್ಬರ ಮುನ್ಸೂಚನೆ ತಪ್ಪಾಗಿದೆ ಎಂದು ಮೌನವಾಗಿ ಒಪ್ಪಿ ವಿತ್ತೀಯ ನೀತಿ ಸಮಿತಿಯು ಕಳೆದ ವಾರ ಎರಡನೇ ತ್ರೈಮಾಸಿಕದ ಸರಾಸರಿ ಹಣದುಬ್ಬರದ ತನ್ನ ಮುನ್ಸೂಚನೆಯನ್ನು ೨೦ ಬೇಸಿಸ್ ಪಾಯಿಂಟ್ಗಳಿಂದ ಹೆಚ್ಚಿಸಿ, ಆಗಸ್ಟ್ ತಿಂಗಳಲ್ಲಿ ನೀಡಿದ್ದ ಶೇ. ೬.೨ರಿಂದ ಈಗ ಶೇ. ೬.೪ಕ್ಕೆ ಹೆಚ್ಚಿಸಿದೆ. ಇದನ್ನು ಸಾಧಿಸಬೇಕೆಂದರೆ ಪ್ರಮುಖ ಹಣದುಬ್ಬರವು ಶೇ. ೫ಕ್ಕಿಂತ ಕಡಿಮೆಯಿರಬೇಕು ಎಂಬುದನ್ನು ಪರಿಗಣಿಸಿದರೆ ಈ ಮುನ್ಸೂಚನೆ ನಿಜ ಆಗುವುದೂ ಅಷ್ಟು ಸುಲಭವಲ್ಲ ಎಂಬುದು ಸ್ಪಷ್ಟ. ಸದ್ಯಕ್ಕೆ, ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಮತ್ತು ತರಕಾರಿ ಬೆಲೆಗಳಲ್ಲಿ ಇತ್ತೀಚಿನ ಇಳಿಕೆ ಹಣದುಬ್ಬರ ಹತೋಟಿಗೆ ತರಲು ಕೊಂಚ ಸಹಾಯ ಮಾಡಬಹುದು ಎಂದು ಎಂಪಿಸಿ ಆಶಿಸುತ್ತಿದೆ. ಗವರ್ನರ್ ಶಕ್ತಿಕಾಂತ ದಾಸ್ ಅವರು ಒಟ್ಟಾರೆ ವಿತ್ತೀಯ ನೀತಿಯ ನಿಲುವನ್ನು ದುರ್ಬಲಗೊಳಿಸುವ ಮಟ್ಟಕ್ಕೆ ದ್ರವ್ಯತೆ (liquidity) ಹೆಚ್ಚಾದರೆ ಹೆಚ್ಚುವರಿ ಹಣವನ್ನು ಹೀರಿಕೊಳ್ಳಲು ಆರ್ಬಿಐ ಸೆಕ್ಯೂರಿಟಿಗಳ ಓಪನ್ ಮಾರ್ಕೆಟ್ ಆಪರೇಷನ್ ಮಾರಾಟಕ್ಕಿಳಿಯಬಹುದು ಎಂದು ಹೇಳಿದರು.
ಅಂಕೆಯಿಲ್ಲದ ಹಣದುಬ್ಬರ ಒಟ್ಟಾರೆ ಆರ್ಥಿಕ ಸ್ಥಿರತೆಗೆ ಅಪಾಯ ಎಂದು ಹೇಳುತ್ತಿರುವಾಗಲೂ ಬಡ್ಡಿದರ ಹೆಚ್ಚಿಸಲು ಆರ್ಬಿಐ ಇಚ್ಛಿಸದಿರುವುದು, ಆರ್ಥಿಕ ಬೆಳವಣಿಗೆಯ ಆವೇಗವು ಇನ್ನೂ ಕಡಿಮೆಯಿದೆ ಎಂದು ಬಹಿರಂಗವಾಗಿ ಹೇಳಿಕೊಳ್ಳದ ಕಳವಳವನ್ನೇ ಸೂಚಿಸುತ್ತದೆ. ಆರ್ಥಿಕ ಮುನ್ಸೂಚಕರ ಈ ಕಳವಳವನ್ನು ಇತ್ತೀಚಿನ ಸರ್ಕಾರಿ ದತ್ತಾಂಶದ ವಿಶ್ವಾಸಾರ್ಹತೆಯ ಬಗ್ಗೆ ಎದ್ದಿರುವ ಪ್ರಶ್ನೆಗಳು ಮತ್ತು ಮೊದಲ ತ್ರೈಮಾಸಿಕದಲ್ಲಿ ಶೇ. ೭.೮ ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿದೆ ಎಂದು ಹೇಳಲು ಬಳಸಿದ ವಿಧಾನವು ಅತಿಯಾದ ಅಂದಾಜಿಗೆ ಕಾರಣವಾಗಿರಬಹುದು ಎಂಬ ಚರ್ಚೆಯ ಹಿನ್ನೆಲೆಯಲ್ಲಿ ನೋಡಬೇಕು. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಮುನ್ನೋಟದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತದ ಸರಕು ರಫ್ತುಗಳಲ್ಲಿನ ದೌರ್ಬಲ್ಯ ಮತ್ತು ಅಸಮರ್ಪಕ ಮುಂಗಾರು ಮಳೆಯಿಂದ ನಿರ್ಣಾಯಕ ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಖಾರಿಫ್ ಬಿತ್ತನೆಯ ಕುಸಿತಕ್ಕೆ ಕಾರಣವಾಗಿದ್ದು, ಇವು ಆರ್ಬಿಐನ ಶೇ. ೬.೫ರಷ್ಟು ಜಿಡಿಪಿ ಬೆಳವಣಿಗೆಯ ಮುನ್ಸೂಚನೆಗೆ ಪ್ರಮುಖ ಅಪಾಯ ಒಡ್ಡಿದೆ. ಆಗಸ್ಟ್ನಲ್ಲಿ ನಡೆದ ಎಂಪಿಸಿ ಸಭೆಗೂ ಇವತ್ತಿಗೂ ರೂಪಾಯಿ ಈಗಾಗಲೇ ಸುಮಾರು ಶೇ.೦.೭ರಷ್ಟು ದುರ್ಬಲಗೊಂಡಿರುವುದರಿಂದ, ಆರ್ಬಿಐ ಬಡ್ಡಿದರವನ್ನು ಹೆಚ್ಚಿಸದಿರುವುದು ಹಣದುಬ್ಬರವನ್ನು ಆಮದು ಮಾಡಿಕೊಳ್ಳುವ ಅಪಾಯ ತಂದೊಡ್ಡಿದೆ.
COMMents
SHARE