ಮನುಕುಲವನ್ನು ಉಳಿಸಿದ ಲಸಿಕೆ

ಕೋವಿಡ್-೧೯ ಎಂ-ಆರ್‌ಎನ್‌ಎ ಲಸಿಕೆಗಳ ಯಶಸ್ಸು ಈ ವರ್ಷ ನೊಬೆಲ್ ವಿಜೇತರನ್ನು ಆಯ್ಕೆ ಮಾಡಿದೆ.

October 04, 2023 11:57 am | Updated 11:57 am IST

ಈ ಬಾರಿ ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶಿತರೆಲ್ಲರೂ ಅತ್ಯುತ್ತಮ ಸಾಧನೆ ಮಾಡಿರುವವರೇ. ಆದರೆ ನೊಬೆಲ್ ವಿಜೇತರ ಆಯ್ಕೆಯು ಬಹಳಷ್ಟು ಬಾರಿ ಸಮಯ ಸಂಧರ್ಭದ ಮೇಲೂ ಅವಲಂಬಿತವಾಗಿರುತ್ತದೆ. ಕೋವಿಡ್-೧೯ ವಿರುದ್ಧ ಪರಿಣಾಮಕಾರಿ ಎಂ-ಆರ್‌ಎನ್‌ಎ ಲಸಿಕೆಯನ್ನು ಅಭಿವೃದ್ಧಿಪಡಿಸಲು ದಾರಿ ಮಾಡಿಕೊಟ್ಟಿದ್ದಕ್ಕೆ ಕ್ಯಾಟಲಿನ್ ಕರಿಕೋ ಮತ್ತು ಡ್ರೂ ವೈಸ್‌ಮನ್ ಈ ಬಾರಿಯ ನೊಬೆಲ್ ಪ್ರಶಸ್ತಿಗೆ ಉತ್ತಮ ಆಯ್ಕೆ. ಹಾಗೆ ನೋಡಿದರೆ ಈ ಆವಿಷ್ಕಾರದ ಪ್ರಯೋಜನಗಳು ಜನರನ್ನು ಇನ್ನೂ ಜೀವಂತವಾಗಿರಿಸಿದೆ ಮತ್ತು ಆಸ್ಪತ್ರೆಗಳಿಂದ ಹೊರಗಿಡುತ್ತಿವೆಯಾದ್ದರಿಂದ ೨೦೨೩ರ ಈ ನೊಬೆಲ್ ಘೋಷಣೆಯು ಆಶ್ಚರ್ಯಕರವಲ್ಲ. ಇದು ಎಲ್ಲ ಮಾನದಂಡಗಳನ್ನೂ ಪೂರೈಸುತ್ತದೆ. ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ‘ಮನುಕುಲಕ್ಕೆ ಹೆಚ್ಚಿನ ಪ್ರಯೋಜನ’ ನೀಡಿದ ಆವಿಷ್ಕಾರಕ್ಕೆ ನೀಡಬೇಕು. ನಿಸ್ಸಂದೇಹವಾಗಿ ಎಂ-ಆರ್‌ಎನ್‌ಎ ಲಸಿಕೆ ಇದನ್ನು ಮಾಡಿದೆ. ಇದು ವಿಜ್ಞಾನಕ್ಕೆ ಮಹಿಳೆಯರ ಕೊಡುಗೆಯನ್ನು ಸಹ ಗುರುತಿಸುತ್ತದೆ. ವೈದ್ಯಕೀಯ ಶಾಸ್ತ್ರದಲ್ಲಿ ಮಾಡಿದ ಸಾಧನೆಗೆ ಇದುವರೆಗೆ ನೀಡಲಾದ ೨೨೫ ನೊಬೆಲ್ ಪ್ರಶಸ್ತಿ ವಿಜೇತರ ಪೈಕಿ ಕೇವಲ ೧೩ ಮಹಿಳೆಯರಿದ್ದಾರೆ. ಒಟ್ಟಾರೆ ಇಲ್ಲಿಯವರೆಗೆ ನೀಡಿರುವ ೮೯೪ ನೊಬೆಲ್ ಪ್ರಶಸ್ತಿ ವಿಜೇತರ ಪೈಕಿ ೬೨ ಮಹಿಳೆಯರಷ್ಟೇ ಇದ್ದಾರೆ.

ಅಡೆತಡೆಗಳನ್ನು ಲೆಕ್ಕಿಸದೆ ಸತತವಾಗಿ ನಡೆಸುವ ಬಹುಶಿಸ್ತೀಯ ಸಂಶೋಧನೆಗಳಿಂದ ಮಾತ್ರ ಉತ್ತಮ ಫಲಿತಾಂಶಗಳು ಲಭಿಸುತ್ತವೆ. ಹಂಗೇರಿಯನ್ ಜೀವರಸಾಯನಶಾಸ್ತ್ರಜ್ಞೆ ಕ್ಯಾಟಲಿನ್ ಕಾರಿಕೋ ಅವರು ಎಂ-ಆರ್‌ಎನ್‌ಎ ಕೇವಲ ಒಂದು ಸಾಧ್ಯತೆಯಾಗಿದ್ದಾಗಲೇ ಈ ಕ್ಷೇತ್ರದತ್ತ ಆಕರ್ಷಿತರಾದರು. ಮಾನವ ಜೀವಕೋಶಗಳಲ್ಲಿ, ಡಿಎನ್‌ಎಯಲ್ಲಿ ಶೇಖರಿಸಲಾದ ಆನುವಂಶಿಕ ಮಾಹಿತಿಯನ್ನು ಮೆಸೆಂಜರ್ ಆರ್‌ಎನ್‌ಎ (ಎಂ-ಆರ್‌ಎನ್‌ಎ) ಗೆ ವರ್ಗಾಯಿಸಲಾಗುತ್ತದೆ ಮತ್ತು ಇದನ್ನು ನಂತರ ಪ್ರೋಟೀನ್ ಉತ್ಪಾದನೆಗೆ ಬಳಸಲಾಗುತ್ತದೆ. ಪ್ರೋಟೀನ್ಗಳು ಜೀವಕೋಶಗಳ ಮುಖ್ಯ ರಚನಾತ್ಮಕ ಅಂಶವಾಗಿದ್ದು ಬೆಳವಣಿಗೆ ಮತ್ತು ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ೧೯೮೦ರ ದಶಕದಲ್ಲಿ, ‘ಇನ್ ವಿಟ್ರೊ ಟ್ರಾನ್ಸ್‌ಕ್ರಿಪ್ಶನ್’ ಎಂಬ ವಿಧಾನವು ಲಸಿಕೆ ಮತ್ತು ಚಿಕಿತ್ಸೆಗಾಗಿ ಎಂ-ಆರ್‌ಎನ್‌ಎ ಅನ್ನು ಬಳಸಲು ಅವಕಾಶ ಒದಗಿಸಿತು. ಆದರೆ ವಿತರಣೆಯಲ್ಲಿನ ಸವಾಲುಗಳು ಮತ್ತು ಇದರಿಂದ ದೇಹದಲ್ಲಿ ಉರಿಯೂತದ ಪ್ರತಿಕ್ರಿಯೆಗಳೂ ಸೇರಿದಂತೆ ಇದು ಒಡ್ಡಿದ ಅಡೆತಡೆಗಳು ಇದರ ಮೇಲೆ ಕೆಲಸ ಮಾಡುವ ಉತ್ಸಾಹ ಕುಗ್ಗಿಸಿತು. ಆದರೆ ಧೃತಿಗೆಡದ ಕರಿಕೊ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾಗಿನಿಂದ ಚಿಕಿತ್ಸೆಗಾಗಿ ಎಂ-ಆರ್‌ಎನ್‌ಎ ಅನ್ನು ಬಳಸುವ ವಿಧಾನಗಳನ್ನು ಅಭಿವೃದ್ಧಿಪಡಿಸುವ ಹಾದಿಯಲ್ಲಿ ಸಂಶೋಧನೆ ಮುಂದುವರೆಸಿದರು. ನಂತರ ರೋಗನಿರೋಧಕ ಶಾಸ್ತ್ರಜ್ಞ ವೈಸ್‌ಮನ್ ಅವರ ಜೊತೆಗೂಡಿದರು. ವೈಸ್‌ಮನ್ ಅವರು ರೋಗನಿರೋಧಕ ಕಣ್ಗಾವಲು ಮತ್ತು ಲಸಿಕೆ-ಪ್ರೇರಿತ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಡೆಂಡ್ರಿಟಿಕ್ ಕೋಶಗಳನ್ನು ಅಧ್ಯಯನ ಮಾಡಿದರು. ಬಹುವರ್ಷಗಳ ಸಂಶೋಧನೆಯ ನಂತರ ಎಂ-ಆರ್‌ಎನ್‌ಎಗೆ ಅನೇಕ ಮಾರ್ಪಾಡುಗಳನ್ನು ಮಾಡುವ ಮೂಲಕ ವಿತರಣಾ ಮಾರ್ಗಗಳನ್ನು ಸರಾಗಗೊಳಿಸಲಾಯಿತು ಮತ್ತು ಉರಿಯೂತದ ಪ್ರತಿಕ್ರಿಯೆಗಳನ್ನು ನಿವಾರಿಸಲಾಯಿತು. ಒಂದು ಅಸಾಧ್ಯ ಅನ್ನಿಸಿದ್ದ ಕಲ್ಪನೆಯು ಕಡೆಗೂ ಫಲಪ್ರದವಾಯಿತು. ಇದಾಗಿದ್ದು ೨೦೦೫ರಲ್ಲಿ, ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೂ ೧೫ ವರ್ಷಗಳ ಮೊದಲು. ಆದರೆ ಈ ಸಂಶೋಧನೆಗೆ ಬೆಲೆ ಬಂದಿದ್ದು ೨೦೧೯ರಲ್ಲಿ. ಕೋವಿಡ್-೧೯ರ ವೈರಾಣುವಿನ ಮೇಲ್ಮೈಯಲ್ಲಿ ಕಂಡುಬರುವ ಎಸ್ ಪ್ರೋಟೀನ್ ಅನ್ನು ಸೃಜಿಸಲು ಮಾನವ ಜೀವಕೋಶಗಳಿಗೆ ಸೂಚಿಸಲು ವಿಜ್ಞಾನಿಗಳು ಎಂ-ಆರ್‌ಎನ್‌ಎ ಲಸಿಕೆಗೆ ಕಲಿಸಿದರು. ಇದು ದೇಹವು ಪ್ರತಿಕಾಯಗಳನ್ನು ಸೃಷ್ಟಿಸಲು ಕಾರಣವಾಗುತ್ತದೆ. ಅದು ವ್ಯಕ್ತಿಯು ಸೋಂಕಿಗೆ ಒಳಗಾಗಿದ್ದರೆ ವೈರಾಣುವಿನ ವಿರುದ್ಧ ಹೋರಾಡುತ್ತದೆ. ಉಳಿದದ್ದು ಇತಿಹಾಸ.

Top News Today

Sign in to unlock member-only benefits!
  • Access 10 free stories every month
  • Save stories to read later
  • Access to comment on every story
  • Sign-up/manage your newsletter subscriptions with a single click
  • Get notified by email for early access to discounts & offers on our products
Sign in

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.