ಕ್ರಿಕೆಟ್ಟಿನ ಅತಿದೊಡ್ಡ ಕ್ರೀಡಾಕೂಟ ಐಸಿಸಿ ವಿಶ್ವಕಪ್ ಗುರುವಾರ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಪ್ರಾರಂಭವಾಗಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ೨೦೧೯ರ ಆವೃತ್ತಿಯ ರನ್ನರ್ ಅಪ್ ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ವಿಶ್ವಕಪ್ನ ೧೩ನೇ ಆವೃತ್ತಿಯು ನವೆಂಬರ್ ೧೯ ರಂದು ಕ್ರೀಡಾಕೂಟದ ಅಂತಿಮ ಪಂದ್ಯಕ್ಕೆ ಅಹಮದಾಬಾದಿಗೆ ಹಿಂತಿರುಗುವವರೆಗೆ ಬಿಡುವಿಲ್ಲದೆ ಪಂದ್ಯಗಳು ನಡೆಯುತ್ತವೆ. ಸಾಂಪ್ರದಾಯಿಕವಾಗಿ ಮುಂಬೈ ಮತ್ತು ಕೋಲ್ಕತ್ತಾ ಭಾರತೀಯ ಕ್ರಿಕೆಟ್ಟಿನಲ್ಲಿ ಪ್ರತಿಷ್ಠಿತ ಕ್ರೀಡಾಂಗಣಗಳು. ಆದರೆ ಈಗ ಅಹಮದಾಬಾದ್ ಮುಂಚೂಣಿಗೆ ಬಂದಿದ್ದು, ಮುಂಬೈ ಮತ್ತು ಕೋಲ್ಕತ್ತಾ ನಗರಗಳು ಬಲವಂತವಾಗಿ ಎರಡನೇ ಸಾಲಿಗೆ ತಳ್ಳಲ್ಪಟ್ಟಿವೆ. ಇದು ಭಾರತೀಯ ಕ್ರಿಕೆಟ್ಟಿನ ಹೊಸ ವಾಸ್ತವ. ಇದು ಸಾಮಾನ್ಯವಾಗಿ ಹಣಬಲ ಮತ್ತು ರಾಜಕೀಯ ಪ್ರಾಬಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ಈ ಹಿಂದೆ ಭಾರತವು ೧೯೮೭, ೧೯೯೬ ಮತ್ತು ೨೦೧೧ರಲ್ಲಿ ಏಕದಿನ ಪಂದ್ಯಗಳ ವಿಶ್ವಕಪ್ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಿವೆ. ಆದರೆ ಆಗೆಲ್ಲ ಉಪಖಂಡದ ಇತರ ದೇಶಗಳೊಡನೆ ಸೇರಿ ಆತಿಥ್ಯ ವಹಿಸಿದ್ದೆವು. ಆದರೆ ಈ ಬಾರಿ ಭಾರತ ಮಾತ್ರ ಏಕಾಂಗಿಯಾಗಿ ಆತಿಥ್ಯ ವಹಿಸಿದೆ. ಚೆನ್ನೈ ಮತ್ತು ಧರ್ಮಶಾಲಾದಂತಹ ವೈವಿಧ್ಯಮಯ ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಶಾಸ್ತ್ರೀಯ ಆವೃತ್ತಿಯ ಟೆಸ್ಟ್ಗಳು ಮತ್ತು ಟ್ವೆಂಟಿ೨೦ ಲೀಗ್ಗಳ ಉನ್ಮಾದದ ನಡುವೆ ಹರಿದು ಹಂಚಿಹೋಗಿರುವ ಆಟದಲ್ಲಿ, ಇತ್ತೀಚೆಗೆ ಏಕದಿನ ಪಂದ್ಯಗಳು ಮನ್ನಣೆ ಕಳೆದುಕೊಂಡಿವೆ. ಆದರೆ ನಾಲ್ಕು ವರ್ಷಗಳಿಗೊಮ್ಮೆ ವಿಶ್ವಕಪ್ ಏಕದಿನ ಪಂದ್ಯಗಳಿಗೆ ಹೊಸ ಹೊಳಪು ನೀಡುತ್ತದೆ. ಈ ಬಾರಿಯ ಆವೃತ್ತಿಯೂ ೨೦೧೯ರಲ್ಲಿ ಲಾರ್ಡ್ಸ್ನಲ್ಲಿ ನಡೆದಂತಹ ರೋಮಾಂಚಕಾರಿ ಕ್ಲೈಮ್ಯಾಕ್ಸ್ನತ್ತ ಸಾಗಿದರೆ ಏಕದಿನ ಪಂದ್ಯಗಳ ಮೋಡಿ ಹೆಚ್ಚುತ್ತದೆ.
೧೯೭೫ರ ಮೊದಲ ವಿಶ್ವಕಪ್ ಪಂದ್ಯಾವಳಿಯಿಂದ ಹಲವು ಮಿಥ್ಯೆಗಳೂ ಹುಟ್ಟಿಕೊಂಡಿವೆ. ಅದರಲ್ಲಿ ಒಂದು ಆತಿಥೇಯರು ಎಂದೂ ವಿಶ್ವಕಪ್ ಗೆಲ್ಲುವುದಿಲ್ಲ ಎಂಬುದು. ಆದರೆ ೨೦೧೧ರ ಏಪ್ರಿಲ್ಲಿನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎಂ. ಎಸ್. ಧೋನಿ ಪಂದ್ಯ ಗೆಲ್ಲುವ ಆ ಸಿಕ್ಸರ್ ಹೊಡೆದ ಕ್ಷಣವೇ ಇದನ್ನು ಸುಳ್ಳು ಮಾಡಿದರು. ಅಂದಿನಿಂದ ೨೦೧೫ರಲ್ಲಿ ಆಸ್ಟ್ರೇಲಿಯಾ ಮತ್ತು ೨೦೧೯ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಆತಿಥ್ಯ ವಹಿಸಿ ಆ ಆವೃತ್ತಿಯನ್ನು ಗೆದ್ದು ಬೀಗಿದ್ದಾರೆ ಕೂಡಾ. ರೋಹಿತ್ ಶರ್ಮಾ ಅವರ ನೇತೃತ್ವದ ತಂಡ ಇದೇ ಪ್ರವೃತ್ತಿಯನ್ನು ಪುನರಾವರ್ತಿಸುವ ಒತ್ತಡದಲ್ಲಿದ್ದಾರೆ. ನಾಲ್ವರು ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಈಗಷ್ಟೇ ಗಾಯದ ಕಾರಣ ವಿಶ್ರಾಂತಿಯಿಂದ ಮರಳಿದ್ದರೂ ಕೂಡಾ ಭಾರತ ತಂಡ ಬಲವಾಗಿ ಕಾಣುತ್ತಿದೆ. ಆದರೆ ತಂಡದ ಸಿಬ್ಬಂದಿ ಒಟ್ಟಾರೆ ಫಿಟ್ನೆಸ್ ಸೂಚ್ಯಂಕವನ್ನು ಗಮನಿಸಬೇಕು. ರೋಹಿತ್, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ದಾಳಿಯನ್ನು ಮುನ್ನಡೆಸುವುದರೊಂದಿಗೆ ತನ್ನ ಪ್ರತಿಸ್ಪರ್ಧಿಗಳನ್ನು ಕಟ್ಟಿಹಾಕುವ ಭಾರತದ ಪ್ರಬಲ ಬ್ಯಾಟಿಂಗ್ ಮಾದರಿಯು ಇನ್ನೂ ಶಕ್ತವಾಗಿರಬಹುದು. ಆದರೆ ಬೌಲರ್ಗಳು, ವಿಶೇಷವಾಗಿ ವೇಗಿಗಳಾದ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಕೂಡಾ ಎದುರಾಳಿ ತಂಡಗಳನ್ನು ಕಟ್ಟಿಹಾಕಬಲ್ಲರು. ಕುಲದೀಪ್ ಯಾದವ್ ಜೊತೆಗೆ ಆರ್. ಅಶ್ವಿನ್ ತಂಡಕ್ಕೆ ಮರಳಿರುವುದು ಸ್ಪಿನ್ ದಾಳಿಯನ್ನು ಬಲಪಡಿಸುತ್ತದೆ. ಉಳಿದ ತಂಡಗಳ ಪೈಕಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನವು ಭಾರತ ತಂಡಕ್ಕೆ ಆಘಾತ ನೀಡಿ ಆತಿಥೇಯರ ಸುಸಜ್ಜಿತ ಯೋಜನೆಗಳನ್ನು ವಿಫಲಗೊಳಿಸಬಹುದು.
COMMents
SHARE